Published on: June 4, 2025
ಚುಟುಕು ಸಮಾಚಾರ : 3rd June 2025
ಚುಟುಕು ಸಮಾಚಾರ : 3rd June 2025
- ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬೆಸ್ಕಾಂ ದೇಶದ ಮೊದಲ ಸೌರಶಕ್ತಿ ಸಂಯೋಜಿತ ಸೆಕೆಂಡ್ ಲೈಫ್ ಬ್ಯಾಟರಿ ಇವಿ ಚಾರ್ಜಿಂಗ್ ಕೇಂದ್ರವನ್ನು ಸ್ಥಾಪಿಸಿದೆ. 24 ಗಂಟೆಗಳ ಕಾಲ ಇವಿ ಚಾರ್ಜಿಂಗ್ ಸೌಲಭ್ಯ ನೀಡುವ ದೇಶದ ಮೊದಲ ಚಾರ್ಜಿಂಗ್ ಸ್ಟೇಷನ್ ಇದಾಗಿದೆ. ಇವಿ ಚಾರ್ಜಿಂಗ್ ಹಬ್ನಲ್ಲಿ 23 ವಾಹನಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಬಹುದಾಗಿದೆ. 18 ಫಾಸ್ಟ್ ಚಾರ್ಜಿಂಗ್ ಪಾಯಿಂಟ್ಗಳು ಮತ್ತು 5 ಸ್ಲೋ ಚಾರ್ಜಿಂಗ್ ಪಾಯಿಂಟ್ಗಳೊಂದಿಗೆ ಒಟ್ಟು 23 ಚಾರ್ಜಿಂಗ್ ಪಾಯಿಂಟ್ಗಳಿವೆ. ಸಾಮರ್ಥ್ಯ: ಈ ಹಬ್ನಲ್ಲಿ 45 ಕಿ.ವ್ಯಾ. ಸೌರ ವಿದ್ಯುತ್ ವ್ಯವಸ್ಥೆ ಮತ್ತು 100 ಕಿ.ವ್ಯಾ.ಹೆಚ್. ಸೆಕೆಂಡ್-ಲೈಫ್ ಬ್ಯಾಟರಿ ಸಂಗ್ರಹಣೆ ಸಾಮರ್ಥ್ಯ ವನ್ನು ಹೊಂದಿದೆ. ಸಹಭಾಗಿತ್ವ: “ಬೆಸ್ಕಾಂ, ಜರ್ಮನ್ ಕಾರ್ಪೊರೇಷನ್ ಫಾರ್ ಇಂಟರ್ನ್ಯಾಷನಲ್ ಕೋ ಆಪರೇಷನ್ (ಜಿ.ಐ.ಝಡ್.) ದಲ್ಲಿ ನಿರ್ಮಾಣಗೊಂಡಿದೆ.
- ಪೈಲಟ್ ತರಬೇತಿ ಕೇಂದ್ರ: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಪೈಲಟ್ ತರಬೇತಿ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ವಿಮಾನ ನಿಲ್ದಾಣದ ನಿರ್ವಹಣೆ ಮಾಡುತ್ತಿರುವ ರಾಜ್ಯ ಕೈಗಾರಿಕಾ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ನಿಗಮವು ಪೈಲಟ್ ತರಬೇತಿ ಕೇಂದ್ರ ಆರಂಭಕ್ಕೆ ಯೋಜನೆ ರೂಪಿಸಿದೆ. ಸದ್ಯ ಮೈಸೂರು ಹಾಗೂ ಕಲಬುರಗಿಯಲ್ಲಿ ಮಾತ್ರ ಖಾಸಗಿ ವಲಯದ ಪೈಲಟ್ ತರಬೇತಿ ಕೇಂದ್ರಗಳಿವೆ. ಪ್ರತಿ ವರ್ಷ 100 ಜನರಿಗೆ ಇಲ್ಲಿ ಪೈಲಟ್ ತರಬೇತಿ ನೀಡಲಾಗುವುದು. ಅದರಲ್ಲಿ 25 ಸೀಟುಗಳನ್ನು ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುವುದು. ಫೈಯಿಂಗ್ ಕ್ಲಬ್ ನಿರ್ಮಾಣಕ್ಕೆ ವಿಮಾನ ನಿಲ್ದಾಣದ ಬಳಿಯೇ 3,500 ಚದರ ಮೀಟರ್ ಸ್ಥಳ ನೀಡಲಾಗುತ್ತದೆ. ಇದರಲ್ಲಿ ಕಚೇರಿ, ತರಗತಿ ಕೊಠಡಿ, ಗ್ರಂಥಾಲಯ ಹಾಗೂ ತರಬೇತಿ ಚಟುವಟಿಕೆಗೆ ಬೇಕಿರುವ ಅತ್ಯಾಧುನಿಕ ಸೌಲಭ್ಯ ಕಲ್ಪಿಸಲು ಬಳಸಲಾಗುತ್ತದೆ.
- ಲಿಂಗತ್ವ ಅಲ್ಪಸಂಖ್ಯಾತ ದಂಪತಿಯು ಮಗುವಿನ ಜನನ ಪ್ರಮಾಣಪತ್ರದಲ್ಲಿ ತಮ್ಮನ್ನು ‘ತಂದೆ’ ಮತ್ತು ‘ತಾಯಿ’ ಎಂದು ನಮೂದಿಸುವ ಬದಲು ‘ಪೋಷಕರು’ ಎಂದು ನಮೂದಿಸಬಹುದು ಎಂದು ಕೇರಳ ಹೈಕೋರ್ಟ್ ಆದೇಶಿಸಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹ ತೀರ್ಪು ಬಂದಿದೆ. ಕೋಯಿಕ್ಕೋಡ್ ನಗರ ಪಾಲಿಕೆಯು ನೀಡಿದ ಜನನ ಪ್ರಮಾಣಪತ್ರದಲ್ಲಿ ಮಗುವಿಗೆ ಜನ್ಮ ನೀಡಿದ ಜಹಾದ್ ಅವರನ್ನು ತಾಯಿ ಎಂದೂ, ಆಕೆಯ ಸಂಗಾತಿ ಜಿಯಾ ಅವರನ್ನು ತಂದೆ ಎಂದು ಉಲ್ಲೇಖಿಸಲಾಗಿತ್ತು. ತಾವಿಬ್ಬರೂ ಲಿಂಗತ್ವ ಅಲ್ಪಸಂಖ್ಯಾತ ಆಗಿರುವುದರಿಂದ ತಮ್ಮನ್ನು ‘ಪೋಷಕರು’ ಎಂದು ಉಲ್ಲೇಖಿಸುವಂತೆ ಕೋರಿದ್ದರು. ನ್ಯಾಯಮೂರ್ತಿ ಜಿಯಾದ್ ರೆಹಮಾನ್ ಅವರ ಪೀಠವು ದಂಪತಿಯ ಅರ್ಜಿಯನ್ನು ಅಂಗೀಕರಿಸಿ, ಇಬ್ಬರನ್ನೂ ‘ಪೋಷಕರು’ ಎಂದು ಉಲ್ಲೇಖಿಸುವ ಜನನ ಪ್ರಮಾಣಪತ್ರವನ್ನು ನೀಡುವಂತೆ ಕೋಯಿಕ್ಕೋಡ್ ನಗರಪಾಲಿಕೆಗೆ ನಿರ್ದೇಶಿಸಿತು. ಜಹಾದ್ ಅವರು ಕೋಯಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ 2023ರ ಫೆ.8ರಂದು ಮಗುವಿಗೆ ಜನ್ಮ ನೀಡಿದ್ದರು. ಲಿಂಗತ್ವ ಅಲ್ಪಸಂಖ್ಯಾತರೊಬ್ಬರು ಮಗುವಿಗೆ ಜನ್ಮ ನೀಡಿದ ಮೊದಲ ಮೊದಲ ಪ್ರಕರಣ ಇದು ಎನ್ನಲಾಗಿತ್ತು.
- ತಜಕಿಸ್ತಾನದಲ್ಲಿ ನಡೆದ ವಿಶ್ವಸಂಸ್ಥೆ ಬೆಂಬಲಿತ ಅಂತರರಾಷ್ಟ್ರೀಯ ಹಿಮನದಿಗಳ ಸಂರಕ್ಷಣೆ ಕುರಿತ ಸಮ್ಮೇಳನದಲ್ಲಿ 2025 ವರ್ಷವನ್ನು ಅಂತರರಾಷ್ಟ್ರೀಯ ಹಿಮನದಿಗಳ ಸಂರಕ್ಷಣಾ ವರ್ಷ ಎಂದು ಗುರುತಿಸಲಾಗುತ್ತಿದೆ. ಹಿಮನದಿ ಕರಗುವುದನ್ನು ತಡೆಯಲು ಮತ್ತು ಹಿಮಗಡ್ಡೆಗಳಿಂದ ಸಿಹಿನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ತುರ್ತು ಕ್ರಮದ ಮೇಲೆ ಕೇಂದ್ರೀಕರಿಸುವ ಉನ್ನತ ಮಟ್ಟದ ಜಾಗತಿಕ ಶೃಂಗಸಭೆಯಾಗಿದೆ. ನಡೆದ ಸ್ಥಳ: ದುಶಾಂಬೆ, ತಜಿಕಿಸ್ತಾನ್, ಘೋಷಣೆ: 2025 ಅನ್ನು ಅಂತರರಾಷ್ಟ್ರೀಯ ಹಿಮನದಿಗಳ ಸಂರಕ್ಷಣಾ ವರ್ಷವೆಂದು ವಿಶ್ವಸಂಸ್ಥೆ ಘೋಷಿಸಿದೆ
- ನಾರ್ವೆ ಚೆಸ್ ಟೂರ್ನಿ: ಹಾಲಿ ವಿಶ್ವ ಚಾಂಪಿಯನ್, ಭಾರತದ ಡಿ.ಗುಕೇಶ್ ಅವರು ನಾರ್ವೆ ಚೆಸ್ ಟೂರ್ನಿಯಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿದರು. ಕ್ಲಾಸಿಕಲ್ ಸ್ಪರ್ಧೆಯಲ್ಲಿ ಗುಕೇಶ್ ಇದೇ ಮೊದಲ ಬಾರಿ ನಾರ್ವೆಯ ಆಟಗಾರನನ್ನು ಸೋಲಿಸಿದರು. ಈ ಗೆಲುವಿನೊಂದಿಗೆ 19 ವರ್ಷ ವಯಸ್ಸಿನ ಗುಕೇಶ್ 8.5 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಏರಿದರು. ಕಾರ್ಲ್ಸನ್ ಮತ್ತು ಅಮೆರಿಕದ ಗ್ರಾಂಡ್ಮಾಸ್ಟರ್ ಫ್ಯಾಬಿಯಾನೊ ಕರುವಾನಾ 9.5 ಅಂಕಗಳೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಮತ್ತೊಂದು ಪಂದ್ಯದಲ್ಲಿ ಭಾರತದ ಜಿಎಂ ಅರ್ಜುನ್ ಇರಿಗೇಶಿ (7.5) ಅವರು ‘ಆರ್ಮ್ಗೆಡನ್’ನಲ್ಲಿ ಚೀನಾದ ಗ್ರಾಂಡ್ಮಾಸ್ಟರ್ ವೀಯಿ ವಿರುದ್ಧ ಗೆಲುವು ಸಾಧಿಸಿದರು. ಕರುವಾನಾ ಅವರು ‘ಆರ್ಮ್ಗೆಡನ್’ನಲ್ಲಿ ಅಮೆರಿಕದ ಹಿಕಾರು ನಕಮುರಾ (7.5) ಅವರನ್ನು ಮಣಿಸಿದರು. ಮಹಿಳೆಯರ ವಿಭಾಗದಲ್ಲಿ ಭಾರತದ ಆರ್.ವೈಶಾಲಿ (8) ಅವರು ಸ್ವದೇಶದ ಕೋನೇರು ಹಂಪಿ (9.5) ಅವರನ್ನು ಮಣಿಸಿದರು. ಈ ಸೋಲಿನ ಹೊರತಾಗಿಯೂ ಹಂಪಿ, ಉಕ್ರೇನ್ ಅನ್ನಾ ಮುಝಿಚುಕ್ (9.5) ಅವರೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.